ಶನಿವಾರ, ಡಿಸೆಂಬರ್ 19, 2009

ಇರುಳ ದೀಪಕ್ಕೆ ನಮನ

[ಅರ್ಪಣೆ : ಕನಸಿಗೆ ರೆಕ್ಕೆ ಕಟ್ಟಿ, ಬಿದ್ದಾಗ ಹೆಗಲ ತಟ್ಟಿ, ಮನಸಿಗೆ ಹುರುಪ ತುಂಬಿ, ತನ್ನುಸಿರ ತುಂಬಾ ನನ್ನನ್ನೇ ಲಾಲಿಸಿ, ಒಲವಿನ ಪೈರು ಬೆಳೆಸಿದ ನನ್ನಿರುಳ ದೀಪ ಅಮ್ಮನಿಗೆ...]

ಅಮ್ಮ...,

ಜೀವನ ಪ್ರೀತಿಯಾ ಕೂಪ, ದಾರಿ ತೋರುವಾ ಸ್ತೂಪ
ಆ ದೇವಿಯಾ ನಿಜ ರೂಪ, ನೀನೊಂದು ಇರುಳ ದೀಪ...

ನಿನ್ನ ಬಗ್ಗೆ ಬರೆಯಲು ಬಹಳಷ್ಟು ಸಲ ನಾನು ಹವಣಿಸಿದ್ದಿದೆ. ಅನುಭೂತಿಯೊಂದರ ಬಗ್ಗೆ ಶಬ್ದಗಳಲ್ಲಿ ವರ್ಣಿಸಲಾರದೆ ನಾನೊಬ್ಬ ಬಾವಿಯೊಳಗಿನ ಕಪ್ಪೆಯಂತೆ ಅನಿಸುತ್ತಿತ್ತು. ಲೇಖನಿ ಹಿಡಿದು ಕುಳಿತಾಗಲೆಲ್ಲ ತೇವವಾದ ಕಣ್ಣುಗಳೊಂದಿಗೆ ಎದುರಿನ ಕಾಗದ, ಮಂಜಿನಲ್ಲಿ ಮುಸುಕಿದ ವಿಸ್ತಾರವಾದ ಬಯಲೊಂದರಂತೆ ಅನಿಸುತ್ತಿತ್ತು.

ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ...

ಧಾರವಾಹಿ ಮುಕ್ತದ ಹಾಡಿನಿಂದ ಸ್ಪೂರ್ತಿಗೊಂಡು ಇರುಳ ದೀಪವೆಂಬ ಹೆಸರನ್ನು ನಿನಗೆ ಅನ್ವರ್ಥವಾಗಿ ಇಟ್ಟಿದ್ದಂತೂ ನಿಜ. H.S.Venkateshamurthy ಆ ಸಾಲುಗಳನ್ನು ಸ್ವತಂತ್ರತೆ(ಮುಕ್ತತೆ)ಯ ಬಗ್ಗೆ ಬರೆದಿರಬಹುದಾದರೂ, ಇರುಳ ದೀಪ ಎನ್ನುವ ಶಬ್ದ ಕೇಳಿದಾಗ ಮಾತ್ರ ಅಮ್ಮನನ್ನೇ ನೆನೆಸುವಂತಿತ್ತು. ನೀನು ಅನಿರ್ವಚನೀಯ ಎನ್ನುವುದು ನಿಜವಾದ್ರು, ನಿನ್ನ ವರ್ಚಸ್ಸಿಗೆ ಸಮೀಪವಾದ ಪದಪುಂಜಗಳನ್ನು, ನನ್ನೆದೆಯ ಮಿಡಿತಕ್ಕೆ ತಕ್ಕಂತೆ ಆರಿಸಿದ್ದೇನೆ.

ಜೀವದೊಳು ಜೀವ ಇರುವಾಗಲೇ ನೀ ನನಗೆ ಮುದ್ದು ಮಾಡುತ್ತಿದ್ದಿಯಲ್ಲ...
ನಿನ್ನ ಜೀವನ ಪ್ರೀತಿಯನ್ನು ಅಲ್ಲೇ ನೀ ಧಾರೆ ಎರೆದಿದ್ದೀಯಲ್ಲಾ...
ಅಲ್ಲೇ ಜೊಗುಳವನ್ನೂ ಹಾಡಿದ್ದೀಯಲ್ಲಾ...

ನೀನು ಖಾರ ತಿಂದ್ರೆ, ನನಗೂ ಖಾರವಾಗಬಹುದೆಂದು ನಿನಗಿಷ್ಟವಾದ ಖಾರವನ್ನೂ ತಿನ್ನುವುದು ಬಿಟ್ಟಿರಲಿಲ್ಲವೇ...?
ನಾನು ಚೆನ್ನಾಗಿ ಮಲಗಿರಬಹುದೇ, ಇಲ್ಲಾ... ಆಟವಾಡುತ್ತಿರಬಹುದೇ ಎಂದು ನೀ ಎಲ್ಲೆಂದರಲ್ಲಿ ಯೋಚಿಸುತ್ತಿರಲಿಲ್ಲವೇ...?
ನೀನು ಪುಟ್ಟಾ... ಎಂದು ಹೆಸರಿಟ್ಟು ಕೂಗಿದಾಗ ನಾನೂ ಹೂಂ ಗುಟ್ಟುತ್ತಿರಲಿಲ್ಲವೇ...

ನಿನ್ನೆದುರಿಗೆ ಬಂದ ನಂತರವಂತೂ ರಾಜ ಕುಮಾರನಂತೆ ನನ್ನ ಬೆಳೆಸಿದ್ದೀಯಲ್ಲಾ...
ನೀನುಣಿಸುತ್ತಿದ್ದ ಅಮೃತವದು ನನ್ನ ಸಿರಗಳಲ್ಲಿನ ಜೀವಕ್ಕೆ ಕಾರಣೀಭೂತವಾದುದು...
ನೀನು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಯಂತು ಹಾಗೇ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿದೆ ಅಮ್ಮಾ...

ನಾನು ಕೆಟ್ಟದಾಗಿ ಗಲೀಜು ಮಾಡಿದಾಗ, ಚೊಕ್ಕದಾಗಿ ಸ್ನಾನ ಮಾಡಿಸಿ...
ಕಣ್ಣ ತೀದಿ, ಹಣೆಯಲೊಂದು ತಿಲಕವಿರಿಸಿ, ಜೊತೆಗೊಂದು ದೃಷ್ಟಿ ಬೊಟ್ಟನ್ನೂ ಇಟ್ಟು...
ನಾನು ಪುಟ್ಟದಾಗಿ ನಕ್ಕಾಗ, ಕೆನ್ನೆಯ ಮೇಲೊಂದು ಹನಿ ಮುತ್ತನಿಟ್ಟು...

ನನ್ನ ಜೊತೆ ಆಟವಾಡಿ, ಊಟಮಾಡಿಸಿ, ಜೊತೆಯಲ್ಲೇ ಇದ್ದು ನನ್ನೆಲ್ಲ ಇಷ್ಟಗಳನ್ನು ಪೂರೈಸಿದ್ದೀಯಲ್ಲಾ...
ನನಗೆ ಹುಷಾರಿಲ್ಲದಾದಾಗ ನಿದ್ದೆಗೆಟ್ಟು ಕಣ್ಣಿಗೆ ಎಣ್ಣೆ ಹಾಕಿ ಕಾದಿದ್ದೀಯಲ್ಲ...
ಆಟವಾಡಿ ಮೈ ಕೈ ಗಾಯ ಮಾಡಿಕ್ಕೊಂಡಾಗ ಸುಶ್ರೂಷಿಸಿದವಳು ನೀನಲ್ಲವೇ...?

ಅಕ್ಕನ ಜೊತೆ ಜಗಳವಾದಾಗ ಸಂಧಾನವನ್ನೂ ಮಾಡಿಸುತ್ತಿದ್ದೀಯಲ್ಲಾ...
ನನಗಿಷ್ಟವಾದ ತಿಂಡಿಗಳನ್ನೇ ಮಾಡಿ ಸದಾ ನನ್ನ ಖುಶಿಗೊಳಿಸುತ್ತಿದ್ದವಳು ನೀನಲ್ಲವೇ...?
ಆ ದಿನ ನದೀದಡದಲ್ಲಿ ಗೇರುಬೀಜ(ಗೋಡಂಬಿ) ಸುಟ್ಟುಕೊಟ್ಟಿದ್ದಂತೂ ನೆನೆಯಲಾರದೆ ಇರಲಾರೆ ಅಮ್ಮಾ...

ಕಾಲೇಜು ದಿನಗಳಲ್ಲಿ ಬೆಳಿಗ್ಗೆ ಬೇಗನೆ ಹೋಗಬೇಕೆಂಬ ಕಾರಣಕ್ಕೆ, ನೀನು ನಾಲ್ಕು ಗಂಟೆಗೇ ಎದ್ದು ತಿಂಡಿ ಮಾಡುತ್ತಿದ್ದುದು ನೆನಪಾಗುತ್ತಮ್ಮಾ...
ಕೊಳೆಯಾದ ನನ್ನ ಬಟ್ಟೆಗಳನ್ನು, ಒಂದು ದಿನವೂ ನೀನು ಬೇಸರಿಸದೆ ಒಗೆದು ಹಾಕಿದ್ದೀಯಲ್ಲಾ...
ದೂರದೂರಿಗೆ ಕಾಲೇಜು ಸೇರುವಾಗ ಖುಶಿಯಾಗಿ ಕಳುಹಿಸಿದಳ ಮನಸಿನೊಳು ಬಿಕ್ಕುತ್ತಿದ್ದದ್ದು ನನಗೆ ಕೇಳಿಸುತ್ತಿತ್ತಮ್ಮಾ...

ಇರುಳಲ್ಲೇ ನಿಂತು ನೀ ನನ್ನ ಬಾಳಿನ ಬೆಳಕಿಗೆ ಕಾರಣವಾದೆ...
ಅಮ್ಮಾ..., ಈ ಋಣ ಯಾವ ಜನುಮದಲಿ ತೀರಿಸಲಮ್ಮಾ...?
ನೀ ಇರುಳ ದೀಪ...

ಬುಧವಾರ, ಡಿಸೆಂಬರ್ 9, 2009

ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು...?

[ಅರ್ಪಣೆ : ನನ್ನ ಬ್ಲಾಗ್ ನಲ್ಲಿ ಹೊಸ ಬರಹಗಳನ್ನು ಕಾಣದಿರುವುದಕ್ಕೆ, ನನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ, ಬರೆಯಲೇ ಬೇಕೆಂದು ತಾಕೀತು ಮಾಡಿ, ಬರಹಕ್ಕೆ ಉತ್ತಮ ತಳಹದಿಯನ್ನೂ ಶೀರ್ಷಿಕೆಯನ್ನೂ ನೀಡಿ, ಮಿತ್ರರಲ್ಲೊಬ್ಬರ ಕಥೆಯನ್ನೂ ಬರೆಯಲು ಅನುಮತಿಯನ್ನು ದೊರಕಿಸಿ ಕೊಟ್ಟ ನನ್ನ ಮೂವರು ಮಿತ್ರರಿಗೆ...]

ಅಮ್ಮಣ್ಣೀ...,

ಯಾಕೋ ನಿನ್ನ ಮದುವೆ ಕಳೆದ ನಂತರ ನನ್ನ ಮನಸು ಅಲ್ಲೋಲ-ಕಲ್ಲೋಲವಾಗಿದೆ. ನಿನ್ನ ಮದುವೆಯ ದಿನ ನಾನು ಬಂದಿದ್ದೆ ನಿಜ. ಆದರೆ ನನ್ನ ಮನ ನಿರ್ಭಾವುಕವಾಗಿತ್ತು. ಆ ರಾತ್ರಿ ಮನೆಗೆ ಹಿಂತಿರುಗಿದವನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕೋಡಿ ಹರಿಸಿದ್ದೆ. ಮುಂದೆರಡು ದಿನಗಳ ತನಕ ಎಲ್ಲವೂ ಚೆನ್ನಗೇ ಇತ್ತು. ಆಮೇಲೆ ನನಗೆ ಮಂಕು ಕವಿದಿತ್ತು. ಮನಸು ಮುದುಡಿತ್ತು. ಕೆಲವೊಮ್ಮೆ ಭಾವೋತ್ಕಟತೆಗೆ ಸಿಲುಕಿ ಮನೆಯವರಿಗೆ, ಗೆಳೆಯರಿಗೆ ಕಿರಿಕಿಕಿಯಾಗುತ್ತಿತ್ತಂತೆ. ಮನೆಗೆ ಬಂದ ಬಂಧುಗಳೆಡೆಯಲ್ಲಿ ನನ್ನ ಮನೆಯವರು ಪೇಚಿಗೂ ಸಿಲುಕಿದ್ದರಂತೆ, ನನ್ನಿಂದಾಗಿ! ನೀನು ಬೇಸರಿಸದಿರು ಅಮ್ಮಣ್ಣೀ... ಸುಮಾರು ಒಂದು-ವರೆ ತಿಂಗಳಷ್ಟು ಕಾಲ ಡಾಕ್ಟರ್ ಸುಬ್ರಹ್ಮಣ್ಯಮ್ ಕೊಟ್ಟ ಔಷಧಿ ತೆಗೆದುಕ್ಕೊಂಡ ನಂತರ, ಈವಾಗ ನಾನು ಚೆನ್ನಾಗೇ ಇದ್ದೇನೆ...ಈಗ ನಿನಗೆ ಅರ್ಥವಾಗಿರ ಬೇಕು, ನಾನ್ಯಾಕೆ ಇಷ್ಟು ದಿನ ಈ ಬ್ಲಾಗ್ ಅಪ್ ದೇಟ್ ಮಾಡಿಲ್ಲಾ ಅಂತ.

ನನ್ನ ಬರಹದ ಶೀರ್ಷಿಕೆಯನ್ನು"ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು?" ಅಂತ ಇರಿಸಬೇಕೆಂದು ಮಿತ್ರ ಕೂಟದಿಂದ ಅಪ್ಪಣೆಯಾಗಿತ್ತು. ಯಾಕೋ ಕೆಲವು ಒತ್ತಡಗಳಿಂದ ಬರೆಯಲಾಗಲಿಲ್ಲ, ಮಿತ್ರ ಕೂಟದಿಂದಲೇ ಒಬ್ಬರನ್ನು ಕಥಾ ನಾಯಕನ್ನ್ನಾಗಿ ಆಯ್ಕೆ ಮಾಡಿದ್ದೂ ಆಯ್ತು. ಆತನಿಗೆ ಮದುವೆಯ ವಯಸ್ಸು. ಹಾಗೆಂದು ತಪ್ಪಾಗಿ ಗ್ರಹಿಸದಿರಿ. ಈತನಿಗೆ ಅದರ ಹುಚ್ಚೇನೂ ಇಲ್ಲ! ಊರಿಂದ ಅವನ ಅಮ್ಮ ಫೋನ್ ಮಾಡಿ, ಹುಡುಗಿಯೊಬ್ಬಳ ವಿವರ ನೀಡಿ, ಆಕೆಯನ್ನು ನೋಡಿ ಬರಬೇಕೆಂದು ಹೇಳಿದ್ದರು. ಸರಿ, ಶನಿವಾರ ಬೆಳಿಗ್ಗೆ ಆಕೆಯ ಆಫೀಸಿನ ಮೆಟ್ಟಿಲಲ್ಲಿ ಕುಳಿತು ಈತ ಕಾದದ್ದೇ ಕಾದಿದ್ದು... ಸುಮಾರು ಹುಡುಗಿಯರು ಬಂದು ಹೋಗುತ್ತಿದ್ದರಂತೆ. ಆಕೆಯ ಮುಖ ದರ್ಶನ ಆಗಿರಲಿಲ್ಲ. ಒಬ್ಬನೇ ಹೊಗಿದ್ದರಿಂದ ಆಫೀಸಿನ ಒಳಗೆ ಹೋಗಿ ಆಕೆಯ ಬಗ್ಗೆ ಕೇಳಲು ಯಾಕೋ ಅಳುಕಾಗಿ, ಆಕೆಯನ್ನು ನೋಡದೇ 11 ಗಂಟೆಗೇ ಹಿಂತಿರುಗಿ ಬಂದಿದ್ದ. ನಾನು ಫೋನು ಮಾಡಿ "OKನಾ...?" ಅಂತ ಕೇಳಿದಾಗೆ "NOT OK" ಅಂದ. "ಯಕೋ? ಚೆನ್ನಾಗಿಲ್ವಾ?" ಅಂತ ಕೇಳಿದ್ರೆ, "ಅವಳು ಯಾರು ಅಂತಾನೇ ಗೊತ್ತಾಗಿಲ್ಲ..." ಅಂತ ಹಲ್ಲು ಕಿಸೀತಿದ್ದ. ಅನಿವಾರ್ಯವಾಗಿ ಆಕೆಯ ಆಫೀಸಿನೆಡೆಗಿನ ಎರಡನೆಯ ಸವಾರಿಯಲ್ಲಿ ಆತನೊಂದಿಗೆ ನಾನು ಹೊರಡಬೇಕಾಯಿತು. ಜೊತೆಗೊಬ್ಬರಿದ್ದುದರಿಂದ ಆತ ಸ್ವಲ್ಪ ಧೈರ್ಯ ತಾಳಿ, ಆಕೆಯ ಆಫೀಸ್ ನೊಳಗೆ ಹೋಗಿ, ಅಕೆಯನ್ನು ಮಾತನಾಡಿಸಿದ್ದು, ಆಕೆಯ ನಗುವಿನಲ್ಲಿ ಆತ ಪುಳಕಿತ ಗೊಂಡಿದ್ದು... ಆಕೆಯ ಅನನ್ಯವಾದ ಕಂಗಳಲ್ಲಿ ಆತ ಹೊಳಪ ಕಂಡಿದ್ದು... ಆಕೆಯ ಸರಳತೆಯ ಸಮ್ಮೋಹನದಲ್ಲಿ ಆತ ಕ್ಲೀನ್ ಆಗಿ ಬೌಲ್ಡ್ ಆದದ್ದು... ಆಕೆಯ ಮಾತಿನ ಹೊನಪಲ್ಲಿ, ಆತ ವೀಣೆಯ ಇಂಪನ್ನು ಕೇಳಿದ್ದು... ಹಿಂತಿರುಗಿ ಬರುವಾಗ ಆತ ತುಂಬಾ excite ಆಗಿರುವುದರಿಂದ ಬೈಕ್ ರೈಡ್ ಮಾಡಲು ನನಗೊಪ್ಪಿಸಿ, ಆತ ಕನಸು ಕಾಣುತ್ತಿದ್ದುದು...!!

ನಾನು ಅಂದ್ಕೊಳ್ತಿದ್ದೆ, ಅಮ್ಮಣ್ಣಿ... ನೀನು ದೂರವಾದಾಗಿನಿಂದ ಬರಿದಾದ ಆ ಸ್ಥಾನಕ್ಕೆ ಯಾರಾದ್ರು ತುಂಬ ಬೇಡ್ವಾ.. ಅಂತ... ಎಷ್ಟು ದಿನ ಅಂತ ಹೀಗೆ ನಿನ್ನ ತೆರವನ್ನು ನಾ ಸಹಿಸಲಿ?

ಕಳೆದ ಸೋಮವಾರ, ಕೆಲಸವೆಲ್ಲ ಮುಗಿಸಿ ಆಫೀಸಿನಿಂದ ಮನೆ ಕಡೆ ಹೋಗುವವನಿದ್ದಾಗ, ಅಚಾನಕ್ ಆಗಿ ನನ್ನ ಇ-ಮೇಲ್ ಗೆಳತಿಯಿಂದ ಫೋನ್ ಕಾಲ್. "ನಾನು ಗಾಂಧೀಬಜಾರಲ್ಲಿದ್ದೇನೆ. ಸಾಧ್ಯವಾದರೆ ಮೀಟ್ ಮಾಡೋಣ ಅಂತ". ಆಕೆ ಬರಹಗಾರ್ತಿ. ಆಕೆಯ ಅಕ್ಷರಗಳೇ ಮುದ್ದು ಮುದ್ದು. ಮೊಲದ ಮರಿಯಷ್ಟು ಮುದ್ದು... ಆಕೆಯ ಮಾತಿನ ಮೋಡಿಯೇ ಹಾಗೆ, ಆಗ ತಾನೇ ಅರಳಿದ ಮಲ್ಲಿಗೆಯ ಮೊಗ್ಗಿನಂತೆ... ಹಾಗೇ ಬೈಕ್ ಗೆ ಪೆಟ್ರೊಲ್ ಹಾಕ್ಕೊಂಡು ಗಾಂಧೀಬಜಾರ್ ಕಡೆ ಬಂದ್ರೆ, ಲೇಡೀಸ್ ವೇರ್ ಹೌಸ್ ಹತ್ರ, ನನ್ನ ಗೆಳತಿಯ ಜೊತೆ, ನನ್ನ ಗೆಳತಿಯ-ಗೆಳತಿಯೂ ಇದ್ದುದು ಒಂದು ಥರ ಮುಜುಗರ, ಖುಷಿ, ಈರ್ಷೆ ಎಲ್ಲವನ್ನೂ ನೀಡೀತು...


ನನ್ನ ಗೆಳತಿ ಜೀನ್ಸ್ ಮತ್ತು ಪಿಂಕ್ T-shirt ನಲ್ಲಿ ಕಂಗೊಳಿಸುತ್ತಿದ್ದರೆ, ಆಕೆಯ ಗೆಳತಿ ಶ್ವೇತವರ್ಣದ ಚೂಡಿಯಲ್ಲಿ ಮಲ್ಲಿಗೆಯ ಕಂಪಿನ ಜೊತೆ ಬಂದಿದ್ದಳು...
ನನ್ನ ಗೆಳತಿಯದು ಶುಭ್ರನಗು(ಖಂಡಿತವಾಗ್ಲೂ ಆಕೆ ಸ್ಮಿತವದನೆಯೇ!), ಆಕೆಯ ಗೆಳತಿಯದು ಮುಗ್ಧವಾದ ನಗು...
ನನ್ನ ಗೆಳತಿಯೋ ಮಾತಿನಲಿ ಬಲು ಚತುರೆ ಹಾಗೂ ಚಟಾಕಿ ಹಾರಿಸುವವಳಾದರೆ, ಆಕೆಯ ಗೆಳತಿ ಸ್ನೇಹಿತರ ಹೃದಯದ ಮಿಡಿತಕ್ಕೆ ಸ್ಪಂದಿಸುವ ನಂದಾದೀಪದಂತಿದ್ದಳು...
ನನ್ನ ಗೆಳತಿ ಅತ್ತ ಇತ್ತ ಕಣ್ಣ ಹೊರಳಿಸಿ, ಮರಿ ಜಿಂಕೆಯಂತೆ ಪುಟಿಯುತ್ತಿದ್ದರೆ, ಆಕೆಯ ಗೆಳತಿ ಒಲವಿನ ತೋರಣ ಕಟ್ಟಿ, ರೆಕ್ಕೆ ಬಿಚ್ಚಿ ಹಾರುವ ಪಾತರಗಿತ್ತಿಯಂತೆ ಕಂಡಳು...

ನನ್ನ ಗೆಳತಿಯ ಮಾತಿನ ಮೋಡಿಗೆ ನಾ ಮರುಳಾದರೆ, ಆಕೆಯ ಗೆಳತಿಯ ಕುಡಿ ನೋಟಕ್ಕೆ ನಾ ಸೋತೆ...
ನನ್ನ ಗೆಳತಿಯ ಪಿಕಿಲಾಟದ ವೈಖರಿಗೆ ನಾ ಮರುಳಾದರೆ, ಆಕೆಯ ಗೆಳತಿಯ ತುಟಿಯಂಚಿನ ನಗುವಿಗೆ ನಾ ಸೋತೆ...
ನನ್ನ ಗೆಳತಿಯ ಹೆಜ್ಜೆಯ ಮಿಡಿತಕ್ಕೆ ನಾ ಮರುಳಾದರೆ, ಆಕೆಯ ಗೆಳತಿಯ ಗೆಜ್ಜೆಯ ಸದ್ದಿಗೆ ನಾ ಸೋತೆ...
ನನ್ನ ಗೆಳತಿಯ ಹೃದಯವಂತಿಕೆಗೆ ನಾ ಮರುಳಾದರೆ, ಆಕೆಯ ಗೆಳತಿಯ ಮನಸಿನ ಆರ್ಧ್ರತೆಗೆ ನಾ ಸೋತೆ...

ಅಮ್ಮಣ್ಣೀ..., ಸಣ್ಣವರಿದ್ದಾಗ ಹುಡುಕುವ ಆಟ ಆಡುವಾಗ ನಮ್ಮನೆ ಅಟ್ಟಕ್ಕೆ ಹತ್ತಿ, ಕೆಳಗಿಳಿಯುವಾಗ ನೀನು ಜಾರಿ ಬಿದ್ದು, ಏಣಿಯ ಮೆಟ್ಟಿಲು ಮುರಿದು, "ತಕಟ್ ಧಂ..." ಅಂತ ದೊಡ್ಡ ಸದ್ದಾಗಿ, ಅಮ್ಮ "ಏನದು ಸದ್ದು?" ಅಂತ ಬೈದು, ಬಿದ್ದಿದ್ದು ನೀನು ಅಂತ ಗೊತ್ತಾದಾಗ "ತಕಟ್ ಧಿಮ್ಮಿ.. ಸ್ವಲ್ಪ ಮೆಲ್ಲಗೆ ಇಳೀ ಬಾರ್ದಾ..." ಅಂತ ಸಮಧಾನಿಸಿದ್ದು ಎಲ್ಲ ನೆನಪಾಗ್ತಿದೆ... ಆಮೇಲೆ "ತಕಟ್ ಧಿಮ್ಮಿ..." ಅಂತನೇ ನಿನ್ನನ್ನು ಎಲ್ಲರೂ ಕರೆಯತೊಡಗಿದ್ದು, ವಿಪರ್ಯಾಸ...!

ಹಾಗೇಯೇ ಈವಾಗ ಯಾರೋ ನನ್ನೆದೆಯ ಮೆಟ್ಟಿಲನ್ನು "ತಕಟ್ ಧಂ..." ಅಂತ ಮುರಿದುಬಿಟ್ಟಿದ್ದಾರೆ. ಆಕೆಯನ್ನೂ, ನಾ ತಕಟ್ ಧಿಮ್ಮಿ ಅಂತಾನೇ ಕರೆಯಲೇ?


ಸಂಜೆಯ ಮಬ್ಬಿನ ಬೆಳಕಿನಲಿ
ನನ್ನ ಹೃದಯಕ್ಕೆ ಸದ್ದಿಲ್ಲದೆ
ಯಾರೋ ಲಗ್ಗೆ ಇಡುತ್ತಿದ್ದಾರಲ್ಲಾ...

ನನ್ನ ಹೃದಯ-ವೀಣೆಯ ತಂತಿಯನ್ನು
ನನ್ನ ಅನುಮತಿ ಇಲ್ಲದೆ
ಯಾರೋ ಮೀಟುತ್ತಿದ್ದಾರಲ್ಲಾ...